ಪಂಡರೀಬಾಯಿ ಬಗ್ಗೆ ನಿಮಗೆ ಗೊತ್ತಿರದ ವಿಷಯಗಳು

Published on

564 Views

ಪಂಡರೀಬಾಯಿ
ಜನನ, ಜನ್ಮಸ್ಥಳ
ಪಂಡರೀಬಾಯಿಯವರು ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ದಲ್ಲಿ ೧೯೨೯ ರಲ್ಲಿ ಜನಿಸಿದರು. ಇವರ ತಂಗಿ ಮೈನಾವತಿ ಯವರು ಕೂಡ ಹೆಸರಾಂತ ಚಿತ್ರ ತಾರೆ.

ವೃತ್ತಿ ಜೀವನ
೧೯೪೩ ರಲ್ಲಿ ವಾಣಿ ಎಂಬ ಕನ್ನಡ ಚಿತ್ರದ ಮೂಲಕ ಚಿತ್ರರಂಗವನ್ನು ಪ್ರವೇಶಿಸಿದರು. ಇವರು ನಾಯಕಿಯಾಗಿ ನಟಿಸಿದ ಮೊದಲ ಚಿತ್ರ ೧೯೫೩ ರಲ್ಲಿ ತೆರೆಕಂಡ ಹೊನ್ನಪ್ಪ ಭಾಗವತರ್ ನಾಯಕತ್ವದ ಗುಣ ಸಾಗರಿ ಎಂಬ ಚಿತ್ರ. ಆದರೆ ಅವರ ವೃತ್ತಿ ಜೀವನಕ್ಕೆ ತಿರುವು ಕೊಟ್ಟ ಚಿತ್ರ ೧೯೫೪ ರಲ್ಲಿ ತೆರೆಕಂಡ ಎಚ್.ಎಲ್.ಎನ್.ಸಿಂಹ ನಿರ್ದೇಶನದ ಬೇಡರ ಕಣ್ಣಪ್ಪ. ಕನ್ನಡದ ಮೇರು ನಟ ಡಾ.ರಾಜ್ ಕುಮಾರ್ ಅವರ ಮೊದಲ ಚಿತ್ರವಾದ ಬೇಡರ ಕಣ್ಣಪ್ಪ ಚಿತ್ರದಲ್ಲಿ ಪಂಡರೀಬಾಯಿಯವರು ರಾಜ್ ಕುಮಾರ್ ಗೆ ನಾಯಕಿಯಾಗಿ ನಟಿಸಿದರು. ಇದಾದ ನಂತರ ಪಂಡರೀಬಾಯಿ ಹಲವಾರು ಚಿತ್ರಗಳಲ್ಲಿ ರಾಜ್ ರೊಂದಿಗೆ ನಾಯಕಿಯಾಗಿ ನಟಿಸಿದರು.ಶ್ರೀಕೃಷ್ಣ ಚೈತನ್ಯ ಸಭಾ ಎಂಬ ರಂಗಭೂಮಿ ಬಳಗವನ್ನು ಕಟ್ಟಿದ ಪಂಡರೀಬಾಯಿಯವರು ಊರೂರು ಅಲೆದು ನಾಟಕಗಳನ್ನೂ ಮಾಡಿದ್ದರು. ರಾಯರ ಸೊಸೆ ಅನುರಾಧಾ ಮುಂತಾದ ಕನ್ನಡ ಸಿನಿಮಾಗಳನ್ನು ಪಾಂಡುರಂಗ ಪ್ರೊಡಕ್ಷನ್ಸ್ ಎಂಬ ಬ್ಯಾನರಿನ ಅಡಿಯಲ್ಲಿ ಇವರೇ ಸ್ವತಃ ನಿರ್ಮಿಸಿದ್ದರು ಕೂಡಾ. ನಂತರ ತಮಿಳು ಚಿತ್ರರಂಗವನ್ನು ಪ್ರವೇಶಿಸಿದ ಪಂಡರೀಬಾಯಿ, ತಮಿಳಿನ ತನ್ನ ಸಮಕಾಲೀನ ನಟರೊಂದಿಗೆ ನಟಿಸಿದರು. ತಮಿಳಿನ ಮೇರು ನಟ ಶಿವಾಜಿ ಗಣೇಶನ್ರವರ ಮೊದಲ ಚಿತ್ರದಲ್ಲೂ ಪಂಡರೀಬಾಯಿಯವರೇ ನಾಯಕಿಯಾಗಿದ್ದರು. ತಮ್ಮ ೫೦ ನೇ ವಯಸ್ಸಿನಲ್ಲಿ ಪಿ.ಹೆಚ್.ರಾಮ ರಾವ್ ಎಂಬವರನ್ನು ವಿವಾಹವಾಗಿದ್ದರು. ಕನ್ನಡ, ತಮಿಳು, ತುಳು, ಕೊಂಕಣಿ, ತೆಲುಗು ಹಾಗೂ ಹಿಂದಿ ಭಾಷೆಗಳೂ ಸೇರಿದಂತೆ ಸುಮಾರು ೫೦೦ ಚಿತ್ರಗಳಲ್ಲಿ ಇವರು ಅಭಿನಯಿಸಿದ್ದರು. ಹಿಂದಿಯಲ್ಲಿ ವೈಜಯಂತಿ ಮಾಲಾ ಬಾಲಿಯವರನ್ನು ಚಿತ್ರರಂಗಕ್ಕೆ ಪರಿಚಯಿಸಿದ “ಬಾಹರ್” ಎಂಬ ಚಿತ್ರದಲ್ಲಿ ಪಂಡರೀಬಾಯಿಯವರು ನಟಿಸಿದ್ದರು. ಚಿತ್ರರಂಗದಲ್ಲಿ ತಾಯಿಯಾಗಿ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದ ಇವರು “ಮನೆತನ” ಎಂಬ ಕನ್ನಡ ದೈನಂದಿನ ಧಾರಾವಾಹಿಯಲ್ಲಿಯೂ ಕಾಣಿಸಿಕೊಂಡಿದ್ದರು. ೧೯೯೪ರಲ್ಲಿ ರಸ್ತೆ ಅಪಘಾತವೊಂದರಲ್ಲಿ ತಮ್ಮ ಎಡಗೈಯನ್ನು ಕಳೆದು ಕೊಂಡಿದ್ದರು.ಪಾಂಡುರಂಗನ ಭಕ್ತೆಯಾಗಿದ್ದ ಪಂಡರೀಬಾಯಿಯವರು ಚೆನ್ನೈನಲ್ಲಿ ಪಾಂಡುರಂಗನ ದೇಗುಲವನ್ನು ಕಟ್ಟಿಸಿದ್ದರು. ತಮ್ಮ ಕೊನೆಗಾಲದಲ್ಲಿ ಅನಾರೋಗ್ಯದಿಂದ ಬಳಲಿದ ಪಂಡರೀಬಾಯಿಯವರು ತಮ್ಮ ೭೩ ನೇ ವಯಸ್ಸಿನಲ್ಲಿ (ಜನವರಿ ೨೯, ೨೦೦೩) ಚೆನ್ನೈನಲ್ಲಿ ನಿಧನರಾದರು

Copyright ©2026 . All Rights Reserved. privacy | terms Whatsapp: 9538193653 Email: hello@flixoye.com