ನಂದಿನಿ ಮತ್ತು ವಿರಾಟ್‍ರ ಮದುವೆ ಸಂಭ್ರಮ

Published on

399 Views

ನಂದಿನಿ ಈಗ 1000 ಸಂಚಿಕೆಯತ್ತ ದಾಪುಗಾಲು ಹಾಕಲು ಸಜ್ಜಾಗುತ್ತಿದೆ. ಪ್ರೀತಿಸಿದ ಜನನಿ ಮತ್ತು ವಿರಾಟ್ ಒಂದಾಗಲು ನೂರಾರು ಅಡೆತಡೆಗಳು ಬಂದು ಜನನಿ ಈಗ ದೂರಾಗಿದ್ದಾಳೆ. ಜನನಿಯನ್ನು ಕಳೆದುಕೊಂಡು ನೋವಿನಲ್ಲಿದ್ದ ವಿರಾಟ್ ಬದುಕಲ್ಲಿ ನಂದಿನಿಯ ಆಗಮನವಾಗಿದ್ದು ಎಲ್ಲರಿಗೂ ಗೊತ್ತಿದೆ. ಜನನಿಯ ಅತೃಪ್ತ ಆತ್ಮಕ್ಕೆ ಶಾಂತಿ ಕೊಡಿಸಲು ಅರ್ಧಕ್ಕೆ ನಿಂತಿರುವ ಕಾಡುಮಲೆ ದೇವಸ್ಥಾನವನ್ನು ಪೂರ್ಣಗೊಳಿಸುವುದೊಂದೆ ಮಾರ್ಗ ಎಂದು ವಿರಾಟ್ ಅರಿಯುತ್ತಾನೆ. ದೇವಸ್ಥಾನದ ಕಾರ್ಯವನ್ನು ಪೂರ್ಣಗೊಳಿಸುವ ರುವಾರಿ ಪರಮೇಶ್ವರ್ ನಿಂದ ಮಾತ್ರ ಸಾಧ್ಯ ಎಂದು ವಿರಾಟ್‍ಗೆ ತಿಳಿಯುತ್ತದೆ. ಆದರೆ ದೇವಸ್ಥಾನ ಪೂರ್ಣಗೊಳಿಸಿದರೆ ತನ್ನ ಮಗಳಾದ ನಂದಿನಿ ನಾಗಕನ್ನಿಕೆಯಾಗಿ ಬದಲಾಗುವಳು ಎಂಬ ರಹಸ್ಯ ತಿಳಿದು ವಿರಾಟ್ ಮಾತನ್ನು ಮೊದಲು ನಿರಾಕರಿಸುತ್ತಾನೆ.

ನಂತರ ತನ್ನ ಮಗಳಿಗೆ ಮಾನವನೊಡನೆ ಸಮ್ಮಿಲನಗೊಂಡರೆ ಶಾಶ್ವತವಾಗಿ ಸಾಮಾನ್ಯ ಮನುಷ್ಯಳಾಗಿ ಉಳಿಯುತ್ತಾಳೆ ಎಂಬ ಪರಿಹಾರ ಅರಿತು, ನಂದಿನಿಯನ್ನು ನಾಗಲೋಕದಿಂದ ದೂರವಿಡಲು ಮತ್ತು ನಾಗತ್ವದಿಂದ ರಕ್ಷಿಸಲು ವಿರಾಟ್ ಜೊತೆ ಮದುವೆ ಮಾಡಲು ಮುಂದಾಗುತ್ತಾನೆ. ಆದರೆ ಈ ಮದುವೆ ಹಾವು-ಮುಂಗುಸಿಯಂತಿರುವ ನಂದಿನಿ ಮತ್ತು ವಿರಾಟ್ ಇಬ್ಬರಿಗೂ ಇಷ್ಟವಿರುವುದಿಲ್ಲ. ನಂದಿನಿಯು ಮನಸಾರೆ ವೀರಬಾಹುನನ್ನು ಪ್ರೀತಿಸುತ್ತಿದ್ದಾಳೆ, ಆದರೆ ವೀರಬಾಹು ನಂದಿನಿಯನ್ನು ತನ್ನ ಸ್ವಾರ್ಥಕ್ಕೋಸ್ಕರ ದಾಳವಾಗಿಸಿಕೊಳ್ಳುತ್ತಿದ್ದಾನೆ. ನಂದಿನಿ ತನ್ನ ತಂದೆಯ ಭಾವನೆಗಳಿಗೆ ಒಳಗಾಗಿ ಮತ್ತು ವಿರಾಟ್ ಜನನಿ ಅತೃಪ್ತ ಆತ್ಮಕ್ಕಾಗಿ, ಮನೆಯವರ ಒಳಿತಿಗಾಗಿ ಈ ಮದುವೆಗೆ ಇಬ್ಬರು ಪರಸ್ಪರ ತಮ್ಮ ಮನಸಾಕ್ಷಿಗೆ ವಿರುದ್ಧವಾಗಿ ಒಪ್ಪಿಗೆ ನೀಡಿರುತ್ತಾರೆ.

ಮದುವೆಯ ತಯಾರಿಗಳು ಅದ್ದೂರಿಯಾಗಿ ಜರುಗುತ್ತಿದ್ದು ಮನೋರಂಜನೆಯೋಂದಿಗೆ ಹಲವಾರು ತಿರುವುಗಳನ್ನು ಉಣಬಡಿಸಲು ವೇದಿಕೆ ಸಜ್ಜಾಗಿದೆ. ನಂದಿನಿಯ ಮದುವೆಯಲ್ಲಿ ನಾಗಲೋಕದ ದೈವಿಕ ಸರ್ಪಗಳೆಲ್ಲ ಮಂತ್ರಾಕ್ಷತೆಗೆ ಸಾಕ್ಷಿಯಾಗಲಿದೆ. ನಾಗಲೋಕದ ಕ್ರೂರ ತಕ್ಷಕ ನಾಗಗಳು ಈ ಮದುವೆಯನ್ನ ತಡೆಯಲು ಹುನ್ನಾರ ಮಾಡ್ತಾ ಇದ್ರೆ, ವಾಸುಕಿ ನಾಗ ಬಣಗಳು ಈ ಮಾಂಗಲ್ಯ ಧಾರಣೆ ಮಾಡಿಸಲು ಹರಸಾಹಸ ಪಡುತ್ತಿವೆ. ತಕ್ಷಕ ಬಣದಿಂದ ಬಂದ ಬ್ರಹ್ಮ ರಾಕ್ಷಸನ ಅನಾವರಣ ವಿಶೇಷ ಗ್ರಾಫಿಕ್ಷ್‍ಗಳಿಂದ ಬಹಳ ಅದ್ದೂರಿಯಾಗಿ ಮೂಡಿಬಂದಿದೆ. ಮದುವೆ ನಿಲ್ಲಿಸಲು ಬ್ರಹ್ಮ ರಾಕ್ಷಸನ ಪಿತೂರಿ ಮತ್ತು ಸಾಹಸಮಯ ದೃಶ್ಯಗಳನ್ನು ವೈಭವಪೂರಿತವಾಗಿ ಬಿಂಬಿಸಲಾಗಿದೆ. ಮತ್ತೊಂದೆಡೆ ವೀರಬಾಹುವನ್ನು ಪ್ರೇಮಿಸುತ್ತಿರುವ ನಂದಿನಿಗೆ ಷಡ್ಯಂತ್ರದಿಂದ ಮದುವೆ ನಿಲ್ಲಿಸುವುದಾಗಿ ವೀರಬಾಹು ಹೇಳಿದ್ದು, ಎಷ್ಟರ ಮಟ್ಟಿಗೆ ಫಲಿಸುತ್ತದೆ ಎಂಬುದನ್ನು ಕಾದುನೋಡಬೇಕಾಗಿದೆ.
ಮದುವೆ ಸಂಭ್ರಮದ ವಿಶೇಷ ಸಂಚಿಕೆಗಳು ಉದಯ ಟಿವಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8.30ಕ್ಕೆ ಪ್ರಸಾರವಾಗುತ್ತದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com