ರಂಗಸಮುದ್ರ” ದಲ್ಲಿ ಖಡಕ್ ವಿಲನ್ ಸಂಪತ್ ರಾಜ್!

Published on

493 Views

ಲಾಕ್ ಡೌನ್ ನಂತರ ಕನ್ನಡ ಚಿತ್ರರಂಗದ ಚಟುವಟಿಕೆಗಳು ಗರಿಗೆದರುತ್ತಿದೆ.. ಒಂದರ ಹಿಂದೆ ಒಂದು ಹೊಸ ಚಿತ್ರಗಳು ತಮ್ಮ ಪ್ರಚಾರಕಾರ್ಯವನ್ನು ಆರಂಭಿಸುತ್ತಿವೆ.

ಸದ್ದಿಲ್ಲದೆ ಆರಂಭವಾಗಿದ್ದ ” ರಂಗ ಸಮುದ್ರ” ಚಿತ್ರದ ಚಿತ್ರೀಕರಣ ಸಹ ಬಹುತೇಕ ಪೂರ್ಣವಾಗಿದೆ. ಎರಡು ದಿನಗಳ ಚಿತ್ರೀಕರಣ ಮಾತ್ರ‌ ಬಾಕಿಯಿದೆ. ಕಿಚ್ಚ ಸುದೀಪ್ ಚಿತ್ರದ ಶೀರ್ಷಿಕೆ ಪೋಸ್ಟರ್ ಅನಾವರಣಗೊಳಿಸಿ, ಶುಭ ಕೋರಿದ್ದರು. ಪೋಸ್ಟರ್ ನಲ್ಲೆ ಗಮನ ಸೆಳೆದಿದ್ದ ರಂಗಸಮುದ್ರ, ವಿಭಿನ್ನ ಶೈಲಿಯಿಂದ ಕುತೂಹಲ ಮೂಡಿಸಿದೆ.

ಕರ್ನಾಟಕ ಹಾಗೂ ಮಹಾರಾಷ್ಟ್ರದ ಗಡಿಭಾಗದಲ್ಲಿರುವ ಊರೊಂದರ ಹೆಸರು “ರಂಗ ಸಮುದ್ರ”. ಊರಿನ ಹೆಸರೇ ಈಗ ಚಿತ್ರದ ಶೀರ್ಷಿಕೆಯಾಗಿದೆ. 20 ವರ್ಷಗಳ ಹಿಂದೆ ಈ ಊರಿನಲ್ಲಿ ನಡೆದ ಫಟನೆಯೇ ಚಿತ್ರದ ಪ್ರಮುಖ ಕಥಾವಸ್ತು. ಅಂದರೆ ಮಾನವೀಯ ಅನುಬಂಧದ ರೆಟ್ರೋ ಕಥಾನಕ ಚಿತ್ರದ ವಸ್ತು.ರಂಗಾಯಣ ರಘು ಮತ್ತು ಸಂಪತ್ ರಾಜ್ ಪ್ರಧಾನ ಪಾತ್ರದಲ್ಲಿದ್ದು ಇದೇ ಮೊದಲಿಗೆ ಹೊಸ ಆಯಾಮದ ಪಾತ್ರಗಳಲ್ಲಿ ಕಾಣಿಸಿ ಕೊಂಡಿದ್ದಾರೆ. ಜನಪದ ಸೊಗಡಿನ ಪಕ್ಕಾ ದೇಸಿ ಕಥೆ ರಂಗಸಮುದ್ರದ ಹೆಗ್ಗಳಿಕೆ.

ಮೈಸೂರು, ಬಿಜಾಪುರ, ಬೆಂಗಳೂರು, ಮಹಾರಾಷ್ಟ್ರ ಮುಂತಾದ ಕಡೆ ನಲವತ್ತು ದಿನಗಳ ಚಿತ್ರೀಕರಣ ನಡೆದಿದೆ.
ತಮ್ಮ ಅಮೋಘ ಅಭಿನಯದ ಮೂಲಕ ಜನಮನ ಸೂರೆಗೊಂಡಿರುವ ರಂಗಾಯಣ ರಘು, ಪಂಚಭಾಷಾ ತಾರೆ ಸಂಪತ್ ರಾಜ್ ಮತ್ತು ಕಾರ್ತಿಕ್, ದಿವ್ಯಾಗೌಡ, ಗುರುರಾಜ ಹೊಸಕೋಟೆ, ಮೋಹನ್ ಜುನೇಜ, ಮೂಗು ಸುರೇಶ್, ಮಹೇಂದ್ರ, ಸದಾನಂದ, ಸ್ಕಂದ ತೇಜಸ್ ಮುಂತಾದವರು ” ರಂಗ‌ ಸಮುದ್ರ” ದಲ್ಲಿ ಅಭಿನಯಿಸಿದ್ದಾರೆ.

ಕನ್ನಡದ ಖ್ಯಾತ ನಿರ್ದೇಶಕರಾದ ಸೂರಿ, ಸುನೀಲ್ ಪುರಾಣಿಕ್, ಬ ಲ ಸುರೇಶ್, ವಿನು ಬಳಂಜ ಮುಂತಾದವರೊಡನೆ ಕಾರ್ಯನಿರ್ವಹಿಸಿರುವ ರಾಜಕುಮಾರ್ ಅಸ್ಕಿ ಈ ಚಿತ್ರದ ನಿರ್ದೇಶಕರು. ಇದು ಇವರ ನಿರ್ದೇಶನದ ಚೊಚ್ಚಲ ಚಿತ್ರ. ನಿರ್ದೇಶಕರೆ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ.

ಹೊಯ್ಸಳ ಕ್ರಿಯೇಷನ್ಸ್ ಲಾಂಛನದಲ್ಲಿ ಹೊಯ್ಸಳ ಕೊಣನೂರು ಈ ಚಿತ್ರ‌ ನಿರ್ಮಾಣ‌ ಮಾಡುತ್ತಿದ್ದಾರೆ. ಐದು ಹಾಡುಗಳಿರುವ ರಂಗಸಮುದ್ರ ಚಿತ್ರಕ್ಕೆ ದೇಸಿ ಮೋಹನ್ ಸಂಗೀತ ನೀಡುತ್ತಿದ್ದಾರೆ. ಆರ್ ಗಿರಿ ಛಾಯಾಗ್ರಹಣ, ಶ್ರೀಕಾಂತ್ (ಕೆ ಜಿ ಎಫ್) ಸಂಕಲನ, ವಾಗೀಶ್ ಚನ್ನಗಿರಿ ಗೀತ ಸಾಹಿತ್ಯ ಹಾಗೂ ಧನಂಜಯ್ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com