ಗೊಂಬೆ ಜೊತೆಗೆ ಯತಿರಾಜ್ ಇದು ಒಂದೇ ಪಾತ್ರದ ಚಿತ್ರ

Published on

553 Views

ಗೊಂಬೆ ಜೊತೆಗೆ ಯತಿರಾಜ್ ಇದು ಒಂದೇ ಪಾತ್ರದ ಚಿತ್ರ
ಪತ್ರಕರ್ತರಾಗಿ, ಕಲಾವಿದರಾಗಿ ಪರಿಚಿತರಾಗಿದ್ದ ಯತಿರಾಜ್ ಈಗ ನಿರ್ದೇಶಕರಾಗಿಯೂ ಪ್ರಸಿದ್ಧಿ. ಒಂದೇ ವರ್ಷದಲ್ಲಿ ಅವರ ಮೂರು ಸಿನಿಮಾಗಳು ಸೆಟೇರಿದೆ. ಆ ಪೈಕಿ “ಸೀತಮ್ಮನ ಮಗ” ಚಿತ್ರ ಬಿಡುಗಡೆಯಾಗಿದ್ದು, “ಮಾಯಾಮೃಗ” ಬಿಡುಗಡೆ ಹಂತದಲ್ಲಿದೆ. ಇದೀಗ ಅವರ ಮೂರನೇ ಚಿತ್ರ “ಬೊಂಬೆ ಹೇಳುತೈತೆ” ಸದ್ಯದಲ್ಲೇ ಆರಂಭವಾಗಲಿದೆ.

“ಬೊಂಬೆ ಹೇಳುತೈತೆ” ನನ್ನ ನಿರ್ದೇಶನದ ನಾಲ್ಕನೇ ಚಿತ್ರ. ಇದೇ ವರ್ಷ ನಾನು ನಿರ್ದೇಶಿಸುತ್ತಿರುವ ಮೂರನೇ ಚಿತ್ರವೂ ಹೌದು. ನನ್ನ ಮಗ ಪೃಥ್ವಿರಾಜ್ ನೀಡಿದ ಎಳೆಯನ್ನಿಟ್ಟುಕೊಂಡು ಚಿತ್ರಕಥೆ ಹೆಣೆಯಲಾಗಿದೆ. ಕೇವಲ ಹದಿನೈದು ದಿನಗಳಲ್ಲಿ ಈ ಚಿತ್ರಕ್ಕೆ ಚಾಲನೆ ದೊರಕಿದೆ. ಚಿತ್ರದ ಸಂಪೂರ್ಣ ಚಿತ್ರೀಕರಣ ಚನ್ನಪಟ್ಟಣದಲ್ಲಿ ನಡೆಯಲಿದೆ. ಅದರಲ್ಲೂ ವಿಶೇಷವಾಗಿ ಕಾವೇರಿ ಆರ್ಟ್ಸ್ ಅಂಡ್ ಕ್ರಾಫ್ಟ್ ಎಂಪೋರಿಯಮ್ ನಲ್ಲಿ ಚಿತ್ರೀಕರಣ ನಡೆಸಲು ಅನುಮತಿ ದೊರೆತಿರುವುದರಿಂದ ಚಿತ್ರಕ್ಕೆ ಬಲ ಬಂದಂತಾಗಿದೆ. ಇನ್ನೂ “ಬೊಂಬೆ ಹೇಳುತೈತೆ” ಚಿತ್ರದ ಬಗ್ಗೆ ಹೇಳ ಬೇಕೆಂದರೆ, ಇಲ್ಲಿ ನಂಬಿಕೆಯ ಪ್ರಶ್ನೆಯಿದೆ. ಸರಿ-ತಪ್ಪುಗಳ ಜಿಜ್ಞಾಸೆಯಿದೆ. ಮಮತೆ – ವಾತ್ಸಲ್ಯಗಳ ವೈರುಧ್ಯವಿದೆ. ಆಸೆ – ದುರಾಸೆಗಳ ಆಳ ಅಗಲವಿದೆ. ವಾಸ್ತವ ಲೋಕದ ಪರಿಚಯಯವಿದೆ. ಅಳುವಿದೆ.. ನಗುವಿದೆ. ಎಲ್ಲರೊಂದಿಗೆ ಬೆರೆಯುವ ವ್ಯಕ್ತಿ ಹೇಗೆ ಏಕಾಂಗಿಯಾಗುತ್ತಾನೆ? ಎಂಬುದೆ ಚಿತ್ರದ ಕೇಂದ್ರ ವಸ್ತು. ಚಿತ್ರದಲ್ಲಿ ಹಲವು ಪಾತ್ರಗಳಿದ್ದರೂ ತೆರೆಯ ಮೇಲೆ ಕಾಣುವುದು ಸಿದ್ದರಾಜು ಪಾತ್ರ ಮಾತ್ರ. ಆ ಪಾತ್ರದಲ್ಲಿ ನಾನೇ ಅಭಿನಯಿಸುತ್ತಿದ್ದೇನೆ. ಈ ಹಿಂದೆ ಒಂದೇ ಪಾತ್ರದ ಕೆಲವು ಚಿತ್ರಗಳು ಬಂದಿದೆಯಾದರೂ ನಮ್ಮ ಚಿತ್ರದ ಕಥೆ ಸಾಗುವ ರೀತಿ ಸ್ವಲ್ಪ ಭಿನ್ನ ಎನ್ನುವ ಯತಿರಾಜ್, ಚಿತ್ರತಂಡದ ಪರಿಚಯ ಮಾಡಿಸಿ, ಸಹಕಾರ ನೀಡುತ್ತಿರುವವರಿಗೆ ಧನ್ಯವಾದ ತಿಳಿಸಿದರು. ಪುನೀತ್ ರಾಜ್‍ಕುಮಾರ್ ಅವರ ಬೊಂಬೆಯ ಮೂಲಕ ಸಮಾಜಕ್ಕೆ ಸಂದೇಶ ಸಾರುವ ಅಂಶ ನಮ್ಮ ಚಿತ್ರದಲ್ಲಿದ್ದು, ಅದಕ್ಕಾಗಿ ಅವರ ಪುಟ್ಟ ಪುತ್ಥಳಿ ಬೇಕಾಗಿತ್ತು. ಅದನ್ನು ಒದಗಿಸಿದ ಇಂಜಿನಿಯರ್ ಸಚಿನ್ ಅವರನ್ನು ವೇದಿಕೆಯಲ್ಲಿ ಪರಿಚಯಿಸಲಾಯಿತು.

ಚಿತ್ರಕಥೆ, ಸಂಭಾಷಣೆ ಬರೆಯುತ್ತಿರುವ ಶ್ರೀಕಾಂತ್, ಛಾಯಾಗ್ರಾಹಕ ವಿದ್ಯಾನಾಗೇಶ್ , ಸಹ ನಿರ್ದೇಶಕ ಅರುಣ್ ಕುಮಾರ್, ಗಾಯಕ ಸಚಿನ್ ಚಿತ್ರದ ಕುರಿತು ಮಾತನಾಡಿದರು. ಎಂ.ಡಿ.ಕೌಶಿಕ್, ವಿ ಶಶಿ ಗೌಡ, ವಿ ಆರ್ ರೆಸಿಡೆನ್ಸಿ ಹೋಟೆಲ್ ನ ಮಾಲೀಕ ಕುಮಾರ್ ಗೌಡ , ಕಾವೇರಿ ಎಂಪೋರಿಯಂ ನ ಅಶ್ವಿನ್ ಗೌಡ ಮುಂತಾದ ಗಣ್ಯರು ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಮಾರುತಿ ಪ್ರೊಡಕ್ಷನ್ಸ್ ಮೂಲಕ ಮಾರುತಿ ಪ್ರಸಾದ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com