ಇನ್ಮುಂದೆ “ನಂದಿನಿ” ಧಾರಾವಾಹಿ “ರಮೇಶ್ ಅರವಿಂದ” ಸಾರಥ್ಯದಲ್ಲಿ

Published on

478 Views

ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ “ನಂದಿನಿ” ಧಾರಾವಾಹಿ ತನ್ನ ನವೀನ ಕತೆ, ಕುತೂಹಲಕಾರಿ ಚಿತ್ರಕಥೆ, ಅದ್ಬುತ ಗ್ರಾಫಿಕ್ ವಿಶುವಲ್ಸ್‍ಗಳಿಂದ ಜನರನ್ನು ಮೋಡಿಮಾಡಿದೆ. ಕಥೆಯ ವೇಗವನ್ನು ಎಲ್ಲಿಯೂ ಕುಗ್ಗಿಸದೆ ಪ್ರತಿಯೊಂದು ಕಂತಿನಲ್ಲಿಯೂ ರೋಮಾಂಚಕ ಸನ್ನಿವೇಶಗಳನ್ನು ಹೆಣೆಯುತ್ತ ಯಶಸ್ಸಿನ ಉತ್ತುಂಗಕ್ಕೆ ತಲುಪಿದೆ.

ಇಂಥಹ ಮನೆ ಮಾತಾಗಿರುವ “ನಂದಿನಿ” ಧಾರಾವಹಿಯ ಮುಂದುವರೆದ ಭಾಗದ ನಿರ್ಮಾಣದ ಸಾರಥ್ಯವನ್ನು ಹ್ಯಾಂಡ್ಸಮ್ ನಟ,ನಿರ್ದೇಶಕ,ನಿರೂಪಕ “ಶ್ರೀ ರಮೇಶ್ ಅರವಿಂದ್” ವಹಿಸುತ್ತಿದ್ದಾರೆ.

ದೈವಶಕ್ತಿ-ದುಷ್ಟಶಕ್ತಿಗಳ ನಡುವಿನ ಘರ್ಷಣೆಯಲ್ಲಿ ಎಷ್ಟೋ ನೋವು-ನಾಶ, ಸೋಲು-ಸಾವುಗಳನ್ನುಂಡು ಇದೀಗ ಆ ಘಟ್ಟದ ಅಂತ್ಯ ಸಮೀಪಿಸಿದೆ. ಎಲ್ಲಾ ರೋಚಕ ಕತೆಗಳ ಹಾಗೇ ಇಲ್ಲಿಯೂ ಕಡೆಯಲ್ಲಿ ಗೆಲುವು ದೈವಶಕ್ತಿಗೆ ಒಲಿದಿದೆ. ದುಷ್ಟ ಸಂಹಾರವಾಗಲಿದೆ.

ಎಲ್ಲವೂ ಮುಗಿದ ಮೇಲೆ ಧಾರಾವಾಹಿಯೂ ಮುಗಿಯಿತೇ ಎಂದು ನಿರಾಸೆಯಲ್ಲಿ ಕೇಳುವ ನೋಡುಗರಿಗೆ ಉತ್ತರವಿದೆ, ಕತೆಯ ಮುಂದುವರೆದ ಭಾಗವಾಗಿ ದುಷ್ಟ ನಂಬೂದರಿ ಮಗ ಅಷ್ಟಾವಕ್ರನ ಅಟ್ಟಹಾಸದ ಎದುರು ನಿಲ್ಲಲು ಶಿಷ್ಟೆ ಗಂಗಾಳ ಮಗಳು ಜನನಿ ಬಂದಿದ್ದಾಳೆ.

ಅಷ್ಟಾವಕ್ರನ ಕ್ರೂರತನಕ್ಕೆ ಗಂಗಾ ಸಂಸಾರ ಬಲಿಯಾಗುತ್ತದೆ, ಎಲ್ಲರೂ ಬಲಿಯಾಗಿ ಕೊನೆಗೆ ಉಳಿಯುವವರೇ ಕಥಾನಾಯಕ ಅರುಣನ ತಾಯಿ ಮತ್ತು ಮಗಳು, ದೇವಸೇನಾ. ದೇವಸೇನಾ ಹರೆಯಕ್ಕೆ ಬಂದಾಗ ತಿಳಿಯುತ್ತದೆ, ಗರ್ಭವತಿಯಾದ ಗಂಗಾ ತೀರಿದ್ದು ತನ್ನ ಮಗುವಿಗೆ ಜನನ ನೀಡಿದ ನಂತರ. ಗುರುಕುಲದಲ್ಲಿ ಬೆಳೆಯುತ್ತಿರುವ ಮುಗ್ದೆ ಜನನಿಯನ್ನು ಬೆಂಗಳೂರಿಗೆ ಕರೆತರುತ್ತಾರೆ, ಕಾಲೇಜಿಗೆ ಸೇರಿಸುತ್ತಾರೆ. ಪಕ್ಕಾ ಹಳ್ಳಿಯಲ್ಲಿ ಸಂಪ್ರದಾಯಸ್ಥ ಆಶ್ರಮದಲ್ಲಿ ಬೆಳೆದ ಜನನಿಗೆ ಪಟ್ಟಣದ ವಾತಾವರಣ ಒಗ್ಗೆದೇ ಒದ್ದಾಡುತ್ತಾಳೆ, ಅದು ಕೆಲವೊಮ್ಮೆ ಹಾಸ್ಯಮಯವಾದರೆ, ಮತ್ತೊಮ್ಮೆ ಭಾವುಕವಾಗಿರುತ್ತದೆ. ಈ ಪಟ್ಟಣದಲ್ಲಿ ತನಗೇ ತಿಳಿಯದಂತೆ ಒಂದಿಷ್ಟು ಶತೃಗಳಿದ್ದರೆ, ಅದಕ್ಕೂ ಅಚ್ಚರಿ ಮೂಡಿಸುವಂತೆ ಒಂದಿಷ್ಟು ಪ್ರಾಣ ನೀಡುವ ಮಿತ್ರರೂ ಸಿಗುತ್ತಾರೆ. ಒಳ್ಳೆಯ-ಕೆಟ್ಟ ಜನರ ನಡುವೆ ಅಷ್ಟಾವಕ್ರ ಕುಹಕಕ್ಕೆ ಬಲಿಯಾಗುತ್ತಾಳೋ ಅಥವಾ ಜಯಿಸುತ್ತಾಳೋ ಎಂಬ ರೋಚಕ ಕಥೆಯೇ ಮುಂದುವರಿದ “ನಂದಿನಿ” ಭಾಗ.

ಮಗಳು ಜನನಿ ಪಾತ್ರವನ್ನು, ಗಂಗಾ ಪಾತ್ರದಿಂದ ಜನಮನ ಸೆಳೆದಿದ್ದ ನಿತ್ಯಾರಾಮ್ ಅವರೇ ಜನನಿಯಾಗಿ ಬರುತ್ತಿದ್ದಾರೆ. ಹಾಗೆ ಈಗಾಗಲೇ ಕಿರುತೆರೆಯಲ್ಲಿ ಗಮನ ಸೆಳೆದ ನಟಿ ಮತ್ತು ನಿರೂಪಕಿ ಕಾವ್ಯಶಾಸ್ತ್ರಿ ದೇವಸೇನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಇದರ ನಿರ್ಮಾಣದ ಜವಾಬ್ದಾರಿಯನ್ನು ಅಚ್ಚುಮೆಚ್ಚಿನ ನಟ ರಮೇಶ್ ಅರವಿಂದ್ ಹೊತ್ತಿದ್ದಾರೆ, ವಂದನಾ ಮೀಡಿಯಾ ಕ್ರಿಯೇಶನ್ಸ್‍ನಡಿಯಲ್ಲಿ ಸ್ವತ: ರಮೇಶ್ ಅರವಿಂದ್‍ಅವರು ಇನ್ಮುಂದೆ ನಿರ್ಮಿಸಲಿದ್ದಾರೆ.

“ಮೊದಲ ಸಲ ಇಡೀ ಕಿರುತೆರೆ ಲೋಕಕ್ಕೆ ನಿರ್ಮಾಪಕನಾಗಿ ಪರಿಚಯಗೊಳ್ಳುತ್ತಿದ್ದೇನೆ ನಂದಿನಿ ಸೀರಿಯಲ್‍ನ ಮೂಲಕ. ನಂದಿನಿಯ ಮೂಲಕತೆಯೇ ನನ್ನನ್ನು ಆಕರ್ಷಿಸಿತ್ತು. ನೈಜ ಕತೆಗಳಲ್ಲಿ ನಟಿಸಿ, ನಿರ್ದೇಶಿಸಿದ ನನಗೆ ಈ ತರಹದ ಫ್ಯಾಂಟಸಿ ಈಥೆ ಹೊಸತೆನಿಸಿತು. ಆ ಸೂಪರ್ ನ್ಯಾಚುರಲ್ ಎಲಿಮೆಂಟ್ಸ್ ಹಾವುಗಳು, ಪ್ರೇತಾತ್ಮಗಳು, ನಮ್ಮನ್ನೆಲ್ಲಾ ಮೀರಿದ ವಿಶೇಷ ಶಕ್ತಿಗಳು, ಅಷ್ಟೇ ಅಲ್ಲದೆ ಕುಟುಂಬದ ಭಾವನಾತ್ಮಕ ಸಂಬಂಧಗಳು. ಇವೆಲ್ಲವೂ ಈ ನಂದಿನಿ ಧಾರಾವಾಹಿಯನ್ನು ನಿರ್ಮಾಣ ಮಾಡಲು ನನ್ನನ್ನು ಪ್ರೇರೇಪಿಸಿತು. ಈ ಕಥಾವಸ್ತುವಿಗೆ ಹೇಳಿ ಮಾಡಿಸಿದಂತಿರುವ ನಿತಿನ್ ಅವರು ನಿರ್ದೇಶಕರಾಗಿ ಬಂದಿದ್ದಾರೆ. ರವಿ ಜೋಶಿಯವರು ನಿರ್ಮಾಣ ನಿರ್ವಹಣೆ ಮಾಡುತ್ತಿದ್ದಾರೆ, ಇಂಥಹ ಉತ್ತಮ ತಂಡದೊಂದಿಗೆ ನನಗೆ ಅದ್ಭುತ ಈ ಜವಾಬ್ದಾರಿಯನ್ನು ಕೊಟ್ಟ ಉದಯ ಟಿವಿಗೆ ಧನ್ಯವಾದಗಳು” ಎಂದು ಈ ಸಂದರ್ಭದಲ್ಲಿ ನಟ,ನಿರ್ದೇಶಕ ರಮೇಶ ಅರವಿಂದ್ ಹೇಳಿದ್ದಾರೆ.

ನಂದಿನಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8.30ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತದೆ.

Copyright ©2024 . All Rights Reserved. privacy | terms Whatsapp: 9538193653 Email: hello@flixoye.com