Gandhada Kudi – Adventure children’s movie

Published on

656 Views

Gandhada Kudi – Adventure children’s movie
Gandhada Kudi – Adventure children’s movie

ಮಕ್ಕಳ ಚಿತ್ರ ಗಳು ಬರುತ್ತವೆ, ಹೋಗುತ್ತವೆ. ಆದರೆ ಇಲ್ಲೊಂದು ಚಿತ್ರ ಬಿಡುಗಡೆಗೆ ಮುಂಚೆಯೇ ಜಾಗತಿಕ ಮಟ್ಟದಲ್ಲಿ ಸುದ್ದಿ ಮಾಡಿದೆ.
ನಾವೀಗ ಹೇಳಹೊರಟಿರುವುದು ಇನ್ವೆಂಜರ್ ಟೆಕ್ನಾಲಜೀಸ್ ಬ್ಯಾನರಿನಲ್ಲಿ ಕೆ.ಸತ್ಯೇಂದ್ರ ಪೈ ಹಾಗು ಕೆ.ಕೃಷ್ಣ ಮೋಹನ್ ಪೈ ನಿರ್ಮಾಣದಲ್ಲಿ ತಯಾರಾದ “ಗಂಧದ ಕುಡಿ” (ಹಿಂದಿಯಲ್ಲಿ “ಚಂದನ್ ವನ್”) ಚಿತ್ರ ದ ಬಗ್ಗೆ.
ಭಾರತ ಮಾತ್ರವಲ್ಲದೆ ಅಮೇರಿಕಾದ ಸ್ಯಾನ್ ಡಿಯಾಗೋ, ಮೆಕ್ಸಿಕೊ, ಚಿಲಿ ಸೇರಿದಂತೆ 20ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ತನ್ನ ಮಡಿಲಿಗೆ ಹಾಕಿಕೊಂಡ ಈ ಚಿತ್ರ ವಿಶ್ವ ಮಟ್ಟದ ಚಿತ್ರ ರಂಗದ ತಂತ್ರಜ್ಞ ರಿಂದ ಪ್ರಶಂಸೆಯನ್ನು ಗಳಿಸಿಕೊಂಡಿದೆ.

ಪಶ್ಚಿಮ ಘಟ್ಟಗಳ ನಾಶದಿಂದ ಉಂಟಾಗುವ ಜಾಗತಿಕ ದುಷ್ಪರಿಣಾಮ ವನ್ನು ಎಳೆ ಎಳೆಯಾಗಿ ಬಿಚ್ಚಿಡುವ ಕಲಾತ್ಮಕ ಕಥಾವಸ್ತುವಿಗೆ ಕಮರ್ಷಿಯಲ್ ಟಚ್ ನೀಡಿರುವುದಲ್ಲದೆ ಈ ಚಿತ್ರವನ್ನು ತಾಂತ್ರಿಕವಾಗಿಯೂ ಶ್ರೀಮಂತಗೊಳಿಸಲಾಗಿದೆ.
ಒಂದು ಗಂಭೀರ ವಿಷಯವನ್ನು ತಿಳಿ ಹಾಸ್ಯದ ಲೇಪನದೊಂದಿಗೆ ಮಕ್ಕಳ ಮೂಲಕ ಹೇಳ ಹೊರಟಿರುವ ನಿರ್ದೇಶಕರ ಪ್ರಯತ್ನ ಚಿತ್ರದುದ್ದಕ್ಕೂ ಎದ್ದು ಕಾಣುತ್ತದೆ.

ಬಿಗಿಯಾದ ಚಿತ್ರ ಕಥೆ,ಸರಳ ನಿರೂಪಣೆ,ಹಿರಿಯ ಹಾಗು ಕಿರಿಯ ಕಲಾವಿದರ ಮನೋಜ್ಞ ಅಭಿನಯ,ಚಿತ್ರ ಕ್ಕೆ ಪೂರಕವಾದ ಹಿನ್ನೆಲೆ ಸಂಗೀತ ಮತ್ತು ಹಾಡುಗಳು, ಚಿತ್ರೀಕರಣಕ್ಕೆ ಆಯ್ಕೆ ಮಾಡಿದ ಮಲೆನಾಡಿನ ರಮಣೀಯ ತಾಣಗಳು ಮತ್ತು ನಯನ ಮನೋಹರ ದೃಶ್ಯ ವೈಭವದಿಂದ ಕೂಡಿದ ಗಂಧದ ಕುಡಿ ಚಿತ್ರವು ಆರಂಭದಿಂದ ಕೊನೆಯವರೆಗೂ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತದೆ.

ಸಂತೋಷ್ ಶೆಟ್ಟಿ ಕಟೀಲು ನಿರ್ದೇಶನ: ಬಾಲಿವುಡ್ ನ ” ಮಂಗಲ್ ಪಾಂಡೆ, ಜೋಧಾ ಅಕ್ಬರ್ ಮುಂತಾದ ಚಿತ್ರಗಳಲ್ಲಿ ಕಲಾ ವಿಭಾಗದಲ್ಲಿ ಸಹಾಯಕ ನಿರ್ದೇಶಕರಾಗಿ ಅನುಭವವಿರುವ ಸಂತೋಷ್ ಶೆಟ್ಟಿ ಕಟೀಲು ಸ್ವತಃ ಅನಿಮೇಷನ್ ತಂತ್ರಜ್ಙರು. ಈ ಮೊದಲು “ಕನಸು ಕಣ್ಣು ತೆರೆದಾಗ” ಎಂಬ ಚಿತ್ರವನ್ನು ನಿರ್ದೇಶಿಸಿದ್ದು ಆ ಚಿತ್ರಕ್ಕೂ ಅಂತರರಾಷ್ಟ್ರೀಯ ಪ್ರಶಸ್ತಿ ಬಂದಿತ್ತು.ಇದೀಗ “ಗಂಧದ ಕುಡಿ” ವಿಭಿನ್ನ ಶೈಲಿಯ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಆದರೆ ಚಿತ್ರ ಬಿಡುಗಡೆಗೆ ಮುನ್ನವೇ ದುರಂತ ಸಾವಿಗೀಡಾಗಿದ್ದು ಖೇದಕರ ಸಂಗತಿ.

ಕಲಾವಿದರು:
ಪ್ರಮುಖ ಪಾತ್ರ ದಲ್ಲಿ ಅಭಿನಯಿಸಿದ ಮುಂಬಯಿಯ ನಿಧಿ ಸಂಜೀವ ಶೆಟ್ಟಿ, ಭಾರತೀಯ ಮೂಲದ ಅಮೆರಿಕಾದ ಕೀಷಾ,ಆಶ್ಲಿನ್,ಪ್ರಣತಿ,ವಿಘ್ನೇಶ್,ಶ್ರೀಶಾ,ಶ್ರೇಯಸ್, ಮುಂತಾದ ಬಾಲ ಕಲಾವಿದರು ಲವಲವಿಕೆಯ ಅಭಿನಯದಿಂದ ಗಮನ ಸೆಳೆಯುತ್ತಾರೆ. ಅಲ್ಲದೆ ಕನ್ನಡದ ಹೆಸರಾಂತ ಹಿರಿಯ ನಟ ರಮೇಶ್ ಭಟ್, ರಾಷ್ಟ್ರಪ್ರಶಸ್ತಿ ಪುರಸ್ಕೃತ ನಟ ಶಿವಧ್ವಜ್ ,ಜ್ಯೋತಿ ರೈ,ಅರವಿಂದ್ ಶೆಟ್ಟಿ ಕೊಜಕೊಳ್ಳಿ, ದೀಪಕ್ ಶೆಟ್ಟಿ, ಯೋಗಿಶ್ ಕೋಟ್ಯಾನ್, ಜಿಪಿ ಭಟ್ ಮುಂತಾದವರು ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ.
ಸಚಿನ್ ಶೆಟ್ಟಿ ಮತ್ತು ಲಕ್ಷ್ಮೀ ಷ್ ಶೆಟ್ಟಿ (ಸ್ಟಡಿ ಕ್ಯಾಮ್)ಛಾಯಾಗ್ರಹಣ, ರವಿರಾಜ್ ಗಾಣಿಗ ಸಂಕಲನ, ಪ್ರದೀಪ್ ರಾಯ್ ಕಲಾ ನಿರ್ದೇಶನ, ಪ್ರೀತಾ ಮಿನೇಜಸ್ ಸಹ ನಿರ್ದೇಶನ ಚಿತ್ರವನ್ನು ತಾಂತ್ರಿಕವಾಗಿ ಇಮ್ಮಡಿಗೊಳಿಸಿದೆ.

ಸಂಗೀತ::
ಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳಿದ್ದು ರಝಾಕ್ ಪುತ್ತೂರು ಸಾಹಿತ್ಯ, ಸಂಭಾಷಣೆ ಬರೆದಿದ್ದಾರೆ. ಪ್ರಸಾದ್ ಕೆ ಶೆಟ್ಟಿ ಸಂಗೀತ ನಿರ್ದೇಶನ ಮಾಡಿದ್ದು ಚಿತ್ರದ ಆಡಿಯೋ ಹಕ್ಕನ್ನು ಲಹರಿ ಸಂಸ್ಥೆ ಪಡೆದು ಕೊಂಡಿದೆ.
ದಕ್ಷಿಣ ಭಾರತದ ಹೆಸರಾಂತ ಗಾಯಕ ವಿಜಯ ಪ್ರಕಾಶ್, ಶ್ರೇಯಾ ಜೈದೀಪ್, ಪ್ರಕಾಶ್ ಮಹದೇವ್, ರವಿ ಮಿಶ್ರಾ, ಸಾತ್ವಿ ಜೈನ್, ಲತೇಶ್ ಪೂಜಾರಿ ಮುಂತಾದವರ ಕಂಠಸಿರಿಯಿಂದ ಮೂಡಿ ಬಂದ ಹಾಡುಗಳು ಕೇಳುಗರನ್ನು ತನ್ಮಯಗೊಳಿಸುತ್ತದೆ.
ಒಟ್ಟಿನಲ್ಲಿ ಹಲವು ವಿಷೇಶತೆಗಳಿಂದ ಕೂಡಿದ ಈ ಚಿತ್ರ ಮಾರ್ಚ್ ಕೊನೆಯ ವಾರದಲ್ಲಿ ರಾಜ್ಯದಾದ್ಯಂತ ತೆರೆ ಕಾಣಲಿದ್ದು ಚಿತ್ರ ಪ್ರೇಮಿಗಳಲ್ಲಿ ಬಹಳಷ್ಟು ನಿರೀಕ್ಷೆ ಮೂಡಿಸಿದೆ.

More pictures from the movie

Copyright ©2024 . All Rights Reserved. privacy | terms Whatsapp: 9538193653 Email: hello@flixoye.com