flixOye
Buzz

ಕಾರ್ಮಿಕರಿಗೆ ಉಡುಗೊರೆ ನೀಡಿ ಕುಂಬಳಕಾಯಿ ಒಡೆದ ಡಾಲಿ.

ಡಾಲಿ ಧನಂಜಯ ನಾಯಕನಾಗಿ ನಟಿಸುತ್ತಿರುವ ‘ಬಡವ ರಾಸ್ಕಲ್’ ಚಿತ್ರದ ಚಿತ್ರೀಕರಣ ಪೂರ್ಣವಾಗಿದೆ.
ಬೆಂಗಳೂರು, ಮೈಸೂರು ಹಾಗೂ ಪಾಂಡವಪುರದಲ್ಲಿ ಚಿತ್ರೀಕರಣ ನಡೆದಿದೆ.

ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಚಿತ್ರಗಳು ನಿರ್ಮಾಣವಾಗುತ್ತದೆ. ಆದರೆ ಚಿತ್ರಕ್ಕಾಗಿ ದುಡಿದವರನ್ನು ನೆನಪಿಸಿಕೊಳ್ಳುವುದು ವಿರಳ.‌
ಆದರೆ ‘ಬಡವ ರಾಸ್ಕಲ್’ ಚಿತ್ರದ ನಿರ್ಮಾಪಕರೂ ಆಗಿರುವ ಡಾಲಿ ಧನಂಜಯ ಅವರು ಚಿತ್ರೀಕರಣದ ಕೊನೆಯ ದಿವಸ ಚಿತ್ರಕ್ಕಾಗಿ ದುಡಿದ ನೂರಕ್ಕೂ ಹೆಚ್ಚು ಕಾರ್ಮಿಕರಿಗೆ ದಿನಬಳಕೆಯ ‌ವಸ್ತುಗಳಾದ ಕುಕ್ಕರ್, ತವ, ಹಾಟ್ ವಾಟರ್ ಬಾಟಲ್ ಮುಂತಾದ ವಸ್ತುಗಳನ್ನು ಉಡುಗೊರೆ ನೀಡಿ, ತಮ್ಮ ಚಿತ್ರದ ಚಿತ್ರೀಕರಣವನ್ನು ಸಂತಸದಿಂದ ಪೂರ್ಣಗೊಳಿಸಿದ್ದಾರೆ.

Advertisement

ಧನಂಜಯ ಅವರ ಈ ಗುಣವನ್ನು ಚಿತ್ರಕ್ಕಾಗಿ ದುಡಿದ ಕಾರ್ಮಿಕರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಮಧ್ಯಮ ವರ್ಗದ ಜನರ ದಿನನಿತ್ಯದ ಜೀವನದಲ್ಲಿ ನಡೆಯುವ ಘಟನೆಗಳೆ ಈ ಚಿತ್ರದ ಕಥಾಹಂದರ.ಡಾಲಿ ಪಿಕ್ಚರ್ಸ್ ಲಾಂಛನದಲ್ಲಿ ಸಾವಿತ್ರಮ್ಮ ಅಡವಿಸ್ವಾಮಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ಶಂಕರ್ ಗುರು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಕಥೆ, ಚಿತ್ರಕಥೆ, ಸಂಭಾಷಣೆಯನ್ನು ಶಂಕರ್ ಗುರು ಅವರೆ ಬರೆದಿದ್ದಾರೆ. ‘ಬಡವ ರಾಸ್ಕಲ್’ ಇವರಿಗೆ ಚೊಚ್ಚಲ ನಿರ್ದೇಶನದ ಚಿತ್ರ.

ಡಾಲಿ ಧನಂಜಯ ಹಾಗೂ ಶಂಕರ್ ಗುರು ಈ ಚಿತ್ರದ ಹಾಡುಗಳನ್ನು ಬರೆದಿದ್ದು, ವಾಸುಕಿ ವೈಭವ್ ಸಂಗೀತ ನೀಡಿದ್ದಾರೆ. ಪ್ರೀತ ಜಯರಾಮನ್ ಛಾಯಾಗ್ರಹಣ, ನಿರಂಜನ್ ದೇವರಮನೆ ಸಂಕಲನ ಹಾಗೂ ವಿನೋದ್ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

ಡಾಲಿ ಧನಂಜಯ ಅವರಿಗೆ ನಾಯಕಿಯಾಗಿ ಅಮೃತ ಅಯ್ಯಂಗಾರ್ ಅಭಿನಯಿಸುತ್ತಿದ್ದಾರೆ. ರಂಗಾಯಣ ರಘು, ತಾರಾ, ಸ್ಪರ್ಶ ರೇಖ, ನಾಗಭೂಷಣ್, ಪೂರ್ಣಚಂದ್ರ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ‌.

ಸಂಬಂಧಿತ · Related