“ಕಾದಂಬರಿ” ಮಧ್ಯಾಹ್ನ 2ಗಂಟೆಗೆ, “ನಿನ್ನಿಂದಲೇ” ಮಧ್ಯಾಹ್ನ 2.30ಕ್ಕೆ
ಕೌತುಕಗಳೊಂದಿಗೆ ಸೃಜನಾತ್ಮಕ ಧಾರಾವಾಹಿಗಳನ್ನು ನೀಡುತ್ತ ಬಂದಿರೋ ಉದಯ ಟಿವಿ, ಡ್ರಾಮಾ , ಆಕ್ಷನ್ , ಹಾರರ್ ಹೀಗೆ ಎಲ್ಲಾ ಬಗೆಯ ಕಾರ್ಯಕ್ರಮಗಳನ್ನು ನೀಡಿ ವೀಕ್ಷಕರನ್ನು ರಂಜಿಸುತ್ತಿದೆ. ಹೊಸ ಪ್ರಯತ್ನಗಳ ಮೂಲಕ ಜನರ ಮನಗೆದ್ದಿರೋ ಈ ವಾಹಿನಿ ಇದೀಗ ಮತ್ತೆ ಹೊಸ 2 ಧಾರಾವಾಹಿಗಳನ್ನು ನೀಡಲು ಸಜ್ಜಾಗಿದೆ.
ಕಾದಂಬರಿ: ಸೋಮವಾರದಿಂದ ಶನಿವಾರ ಮಧ್ಯಾಹ್ನ 2 ಗಂಟೆಗೆ
ಶ್ರೀ ದುರ್ಗಾ ಕ್ರೀಯೇಷನ್ಸ್ ವಿಭಿನ್ನ ಕಥಾಹಂದರವುಳ್ಳ “ಕಾದಂಬರಿ” ಎಂಬ ಧಾರಾವಾಹಿಯನ್ನು ಪ್ರೇಕ್ಷಕರೆದುರಿಡಲು ಸಿದ್ಧವಾಗಿದೆ.

“ಕಾದಂಬರಿ” ಒಂದು ಕೆಳಮಧ್ಯಮ ವರ್ಗದ ಹುಡುಗಿ. ಹೊರದೇಶಕ್ಕೆ ತೆರಳಿ ದುಡಿದು ಬರುವುದಾಗಿ ಎಂದು ಹೇಳಿ ಹೋದ ಅಪ್ಪನ ಸುಳಿವಿಲ್ಲ. ಇದ್ದೊಬ್ಬ ಪ್ರೀತಿಯ ಅಣ್ಣ ಜೀವನದಲ್ಲಿ ಸೋತು ಸರಾಯಿಯ ಸೆರೆಯಾಗಿದ್ದಾನೆ. ಹೀಗಿರುವಾಗ ತುಂಬು ಕುಟುಂಬಕ್ಕೆ ಆಧಾರವಾಗಿ ಇವಳೊಬ್ಬಳದೇ ದುಡಿಮೆ. ಮನೆಯನ್ನು ನೀಯಂತ್ರಿಸಲು ಹಗಲಿರುಳು ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದಾಳೆ. ಇವಳ ಶ್ರದ್ಧೆ, ಪರಿಶ್ರಮ ಕಂಡು ಇವಳ ಬಾಸ್ ಸುದರ್ಶನ್ ಚಕ್ರವರ್ತಿಗೆ ಇವಳ ಮೇಲೆ ಅಭಿಮಾನ, ಅಪಾರ ನಂಬಿಕೆ.

ಮನೆ ಮಗನಂತೆ ದುಡಿತಿರೋ ಕಾದಂಬರಿಗೆ ತನ್ನದೇ ಪುಟ್ಟ ಕನಸಿನ ಗೂಡಿದೆ. ಈಗಿನ ಕಾಲದ ಹುಡಿಗಿಯರಿಗೆಲ್ಲಾ ಬಣ್ಣ-ಬಣ್ಣದ ಕನಸುಗಳಿದ್ದರೆ, ಇವಳಿಗೊಂದೇ ಆಸೆ. ಇವಳ ಮನಸನ್ನು ಅರ್ಥ ಮಾಡಿಕೊಳ್ಳೋ ಒಬ್ಬ ಸಂಗಾತಿಯ ಕೈಹಿಡಿದು, 2 ಮುದ್ದಾದ ಮಕ್ಕಳನ್ನು ಹೆತ್ತು ಗೃಹಿಣಿಯಾಗಿ ಸಂಸಾರ ತೂಗಿಸಬೇಕು ಅಂತ. ಆದರೆ ಬೆನ್ನೇರಿರೋ ಮನೆ ಜವಾಬ್ದಾರಿ ಇವಳ ಕನಸನ್ನು ನನಸು ಮಾಡುತ್ತಾ? ಎಂಬುದು ಈ ಧಾರಾವಾಹಿಯ ಸಾರಾಂಶ.
“ಎಲ್ಲಾ ಧಾರಾವಾಹಿಗಳಲ್ಲಿ ತೋರಿಸೋ ದ್ವೇಷ ಅಸೂಯೆಗಳ ಕಿತ್ತಾಟವಿಲ್ಲದೆ, ಮಮತೆಗೆ ಕರಗೋ ಮಿಡ್ಲ್ ಕ್ಲಾಸ್ ಫ್ಯಾಮಿಲಿಯ ಹೈಕ್ಲಾಸ್ ಕಥೆ ಇದಾಗಿದೆ” ಎಂದು ಎನ್ನುತ್ತಾರೆ ನಿರ್ದೇಶಕ ದರ್ಶಿತ್ ಭಟ್.
ಪ್ರಸಿದ್ಧ ಧಾರಾವಾಹಿಗಳನ್ನು ನೀಡಿರುವ ಗಣಪತಿ ಭಟ್ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಸುನಾದ್ ಗೌತಮ್ ಸಂಗೀತ ಸಂಯೋಜನೆ, ಕೃಷ್ಣ ಕಂಚನಹಳ್ಳಿಯವರ ಛಾಯಾಗ್ರಹಣ, ಗಿರೀಶ್ ಚಿತ್ರಕಥೆ ಮತ್ತು ತುರುವೆಕೆರೆ ಪ್ರಸಾದ್ ಸಂಭಾಷಣೆಯ ಜವಾಬ್ದಾರಿಯನ್ನು ಹೊತ್ತಿದ್ದಾರೆ.

ನಾಯಕಿಯಾಗಿ ಪವಿತ್ರ ನಾಯಕ್ ಮತ್ತು ನಾಯಕನಾಗಿ ರಕ್ಷಿತ್ ನಟಿಸುತ್ತಿದ್ದಾರೆ. ನಾಗೇಂದ್ರ ಶಾ, ಮಾಲತಿ ಸರ್ ದೇಶಪಾಂಡೆ, ಸುರೇಶ್ ರೈ, ಗಾಯಿತ್ರಿ ಪ್ರಭಾಕರ್, ಪ್ರಥಮಾ ರಾವ್, ನಿರಂಜನ್, ಶ್ವೇತಾ, ಪ್ರಗತಿ, ಅರ್ಪಿತ, ಪೃಥ್ವಿ ಯುವಸಾಗರ್, ಲಿಖಿತ, ಅಶೋಕ್ ಬಿ.ಎ, ರಾಧಿಕಾ ಶೆಟ್ಟಿ, ಆನಂದ್ ಹೀಗೆ ಹಲವಾರು ಕಲಾವಿದರನ್ನು ಒಳಗೊಂಡಿದೆ ಈ ಧಾರಾವಾಹಿ.


“ಕಾದಂಬರಿ” ಇದೇ 23 ರಿಂದ ಸೊಮವಾರದಿಂದ ಶನಿವಾರ ಮದ್ಯಾಹ್ನ 2 ಗಂಟೆಗೆ ಉದಯಟಿವಿಯಲ್ಲಿ ಪ್ರಸಾರವಾಗಲಿದೆ.
ನಿನ್ನಿಂದಲೇ : ಸೋಮವಾರದಿಂದ ಶನಿವಾರ ಮಧ್ಯಾಹ್ನ 2.30ಕ್ಕೆ
ಪ್ರಖ್ಯಾತ ನಟ , ರಾಜೇಶ ನಟರಂಗ ನಿರ್ಮಾಣದಲ್ಲಿ ತಯಾರಾಗುತ್ತಿದೆ ನಿನ್ನಿಂದಲೇ ಧಾರಾವಾಹಿ. ಇದೊಂದು ಪ್ರೇಮ ಕಥೆ. ಸುಮಧುರ ಸ್ನೇಹಕ್ಕೆ ಪ್ರೀತಿಯ ಕರೆಯೋಲೆ ಈ ನಿನ್ನಿಂದಲೇ. ಧ್ವನಿ ಕ್ರಿಯೇ಼ಷನ್ಸ್ ಲಾಂಚನದಲ್ಲಿ ಮೊದಲ ಬಾರಿಗೆ ನಿರ್ಮಾಣಕ್ಕೆ ಕೈ ಹಾಕುತಿರೋ ರಾಜೇಶ , ಈ ಪ್ರೇಮ ಕಥೆಯಲ್ಲಿ ಸಾಕಷ್ಟು ಕೌಟುಂಬಿಕ ಆಂಶಗಳನ್ನು ಸೇರಿಸಿದ್ದಾರೆ.

ರಾಜಲಕ್ಷ್ಮಿಯ ದೊಡ್ಡ ಕುಟುಂಬ , ಅಳಿಯನ ಮನೆಯವರ ಜೊತೆಗೆ ಆದ ಮನಸ್ತಾಪದಿಂದ, ಎರಡು ಕುಟುಂಬ ದೂರವಿರುತ್ತೆ. ಈ ಸಂಬಂಧಗಳನ್ನು ಒಂದು ಮಾಡೋಕೆ ಇರೋ ದಾರಿ ತನ್ನ ಮೊಮ್ಮಕ್ಕಳಾದ ಅನನ್ಯ ಮತ್ತು ವರುಣ್ ಮದುವೆ. ನಾಯಕಿಯಾಗಿರೊ ಅನನ್ಯಾಳಿಗೆ ನಾಯಕ ವರುಣ್ ಅಂದ್ರೆ ಪಂಚಪ್ರಾಣ, ಈ ಪವಿತ್ರ ಸ್ನೇಹದಲ್ಲಿ ಪ್ರೀತಿಯ ಅಲೆ ಹೊಮ್ಮಲಿದೆಯಾ? ಎಂಬುದು ಈ ಧಾರಾವಾಹಿಯ ಸಾರಾಂಶ.
ಶರತ್ ಪರ್ವತವಾಣಿಯವರ ಕಥೆಗೆ, ವಿನೋದ್ ಸಂಭಾಷಣೆ ಬರೆಯುತ್ತಿದ್ದಾರೆ. ನಿರ್ದೇಶನದ ಜವಾಬ್ದಾರಿಯನ್ನು ದಿಲೀಪ್ ಹೊತ್ತಿದ್ದಾರೆ. ನಾಯಕಿಯಾಗಿ ಚಿತ್ರಶ್ರೀ ಮತ್ತು ನಾಯಕನ ಪಾತ್ರದಲ್ಲಿ ದೀಪಕ್ ಬಣ್ಣ ಹಚ್ಚುತ್ತಿದ್ದಾರೆ. ಇವರ ಜೊತೆಗೆ ನಟಿ ಜಯಶ್ರಿ , ಲಲಿತಾಂಜಲಿ , ನಮಿತಾ ದೇಸಾಯಿ , ಪ್ರಶಾಂತ್ , ನಂದೀಶ , ಶೋಭಿತಾ ಮುಖ್ಯ ಪಾತ್ರಗಳನ್ನು ವಹಿಸಿದ್ದಾರೆ.

ನಿನ್ನಿಂದಲೇ ಹಾಡಿಗೆ ಸಾಹಿತ್ಯ ಬರೆದಿರುವುದು ಸಾಹಿತಿ ಜಯಂತ್ ಕಾಯ್ಕಿಣಿ. ಸಂಗೀತ ಸಂಯೋಜನೆ ಮಾಡಿರುವುದು ವಸಂತ್ ದನಿಯಾಗಿರೋದು ಮಾನಸ ಹೊಳ್ಳ.
“ನಿನ್ನಿಂದಲೇ”ಇದೇ 23 ರಿಂದ ಸೊಮವಾರದಿಂದ ಶನಿವಾರ ಮದ್ಯಾಹ್ನ 2.30ಕ್ಕೆ ಉದಯಟಿವಿಯಲ್ಲಿ ಪ್ರಸಾರವಾಗಲಿದೆ.









