‘ಮಜೆಸ್ಟಿಕ್’ ಕನ್ನಡ ಸಿನಿಮಾ 16 ನೇ ವರ್ಷದ ನೆನಪು
ಕನ್ನಡ ಚಿತ್ರರಂಗದ ಬಾಕ್ಸ್ ಆಫೀಸು ಗಳಿಕೆಯಲ್ಲಿ ಧೂಳೆಬ್ಬಿಸಿದ ‘ಮಜೆಸ್ಟಿಕ್’ ಕನ್ನಡ ಸಿನೆಮಾ ಛಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ವೃತ್ತಿ ಬದುಕಿನ ಒಂದು ಹೊಸ ಅಧ್ಯಾಯ ಬರೆದ ಚಿತ್ರ ಸಹ ಹೌದು.
ಗುರುವಾರ ನೆಲಮಂಗಲ ಬಳಿಯ ಒಂದು ಖಾಸಗಿ ರೆಸಾರ್ಟ್ ಅಲ್ಲಿ ‘ಮಜೆಸ್ಟಿಕ್’ ಸಿನಿಮಾದ 16ನೇ ವರ್ಷದ ನೆನಪು ಹಾಗೂ ಅದಕ್ಕೆ ದುಡಿದ ವ್ಯಕ್ತಿಗಳನ್ನು ಗೌರವಿಸುವ ಕಾರ್ಯಕ್ರಮ ಸಹ ಹಮ್ಮಿಕೊಳ್ಳಲಾಗಿತ್ತು. ಹಾರ, ಶಾಲು,ಮೈಸೂರು ಟೋಪಿ ಹಾಗೂ ಹಣ್ಣಿನ ಬುಟ್ಟಿ ಗೌರವರ್ಪಣೆಯ ಭಾಗವಾಗಿತ್ತು.
ನಾಯಕ ದರ್ಶನ್ ಅವರು ಅಂದು ನಿರ್ಮಾಪಕ ಎಂ ಜಿ ರಾಮಮೂರ್ತಿ ಅವರು ಬಳಸುತ್ತಾ ಇದ್ದ ಮಾರುತಿ 800 ಕಾರನ್ನು ಅವರಿಂದ ಪಡೆದದ್ದು ವಿಶೇಷವಾಗಿತ್ತು. ಅಂದಿನ ದಿನಗಳನ್ನು ಮೆಲುಕು ಹಾಕುತ್ತಾ ಮಾರುತಿ 800 ಕಾರಿನಲ್ಲಿ ದರ್ಶನ್ ಒಂದು ಸುತ್ತು ಹೋಗಿ ಬಂದರು. ಆ ಮಾರುತಿ 800 ಕಾರಿನ ಸಂಖ್ಯೆ 3483 ದರ್ಶನ್ ಅವರ ನೆನಪಿನಲ್ಲಿ ಇತ್ತು. ಅಂದು ಆಸೆ ಪಟ್ಟ ಕಾರು ಇಂದು ದರ್ಶನ್ ಅವರ ಮನೆಯಲ್ಲಿ ಒಂದು ಅಮೂಲ್ಯ ನೆನಪಾಗಿ ಉಳಿಯಲಿದೆ.
‘ಮಜೆಸ್ಟಿಕ್’, ‘ಧರ್ಮ’ ಸಿನಿಮಾಗಳನ್ನು ಎಂ ಜಿ ರಾಮಮೂರ್ತಿ ಅವರು ನಿರ್ಮಾಣ ಮಾಡಿರುವುದು ತಿಳಿದಿದೆ. ಈಗ ಅವರದು ದರ್ಶನ್ ಅವರ ಜೊತೆ ಮೂರನೇ ಚಿತ್ರ ಹಾಗೂ ಅದು ದರ್ಶನ್ ಅವರ 53 ನೇ ಸಿನಿಮಾ ಎಂದು ಸಹ ಘೋಷಣೆ ಆಯಿತು.
ಮಜೆಸ್ಟಿಕ್ ಸಿನಿಮಾದ ನಿರ್ದೇಶಕರಾದ ಪಿ ಎನ್ ಸತ್ಯ, ಸಹ ನಿರ್ದೇಶಕರಾಗಿದ್ದ ಮಾದೇಶ್ ಹಾಗೂ ಸುರೇಶ್ ಗೋಸ್ವಾಮಿ, ಪ್ರಚಾರಕರ್ತ ವಿಜಯಕುಮಾರ್, ಛಾಯಾಗ್ರಾಹಕರಾದ ಎಂ ಆರ್ ಸೀನು ಹಾಗೂ ಅಣಜಿ ನಾಗರಾಜ್ , ಮ್ಯಾನೇಜರ್ ರಾಮು ಸ್ಥಿರ ಛಾಯಾಗ್ರಹಕ ರಮೇಶ್ ಹಾಗೂ ಇನ್ನಿತರರನ್ನು ಅಂದು ಸನ್ಮಾನಿಸಲಾಯಿತು. ಎಂ ಜಿ ರಾಮಮೂರ್ತಿ ಹಾಗೂ ದರ್ಶನ್ ಅವರ ಲವಲವಿಕೆಯ ಉಪಸ್ಥಿತಿ ಅಂದು ನೆರದವರಿಗೆ ಆತ್ಮೀಯತೆ ತುಂಬಿದ ಕಾರ್ಯಕ್ರಮ ಆಗಿ ಕಂಡುಬಂದಿತು.
ಹಿರಿಯ ನಟರುಗಳಾದ ಜೈ ಜಗದೀಶ್, ಹರೀಶ್ ರಾಯ್, ನಿರ್ಮಾಪಕ ಭೋಜರಾಜ ರೈ ಹಾಗೂ 200ಕ್ಕು ಹೆಚ್ಚು ಮಂದಿ ಅಂದಿನ ಔತಣ ಕೂಟದಲ್ಲಿ ಪಾಲ್ಗೊಂಡು ಹರ್ಷದ ದಿವಸಗಳನ್ನು ಮೆಲುಕು ಹಾಕಿ ನೆಮ್ಮದಿ ಪಟ್ಟುಕೊಂಡರು.
